ಮಂಗಳೂರು, ಫೆ.26: ಮೂರನೇ ತರಗತಿವರೆಗೆ ಶಾಲಾ ಶಿಕ್ಷಣ ಪಡೆದಿದ್ದರೂ, ಸ್ಥಳೀಯ ಭಾಷೆಗಳ ಜತೆಗೆ ಇಂಗ್ಲಿಷ್, ಹಿಂದಿ, ತಮಿಳು, ಗುಜರಾತಿ ಭಾಷೆಯಲ್ಲಿ ಚೆನ್ನಾಗಿ ಮಾತನಾಡುತ್ತೇನೆ. ನನಗೆ ಎಂದಿಗೂ ಭಾಷೆ ವ್ಯವಹಾರಕ್ಕೆ ತೊಡಕು ಆಗಿಲ್ಲ ಎಂದು ಉದ್ಯಮಿ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಯು.ಕೆ.ಮೋನು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ತಿಂಗಳ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು ನನಗೆ ಪರಮಾಪ್ತ ಸ್ನೇಹಿತರು ಸಮಾಜದಲ್ಲಿ ಯಾರು ಇಲ್ಲ. ಬದುಕಿಗೆ ಅನುಭವ ಪಡೆಯಲು ಕೂಲಿ ಕೆಲಸ ಮಾಡಿದ್ದೇನೆ, ಮಣ್ಣು ಹೊತ್ತಿದ್ದೇನೆ, ಮೀನು ಹೊತ್ತಿದ್ದೇನೆ , ಇದ್ದಿಲು ತಯಾರಿಕೆ ಕೆಲಸ ಮಾಡಿದ್ದೇನೆ. ಹನ್ನೆರಡನೆ ವಯಸ್ಸಿನಲ್ಲಿ ತಂದೆ ಇದ್ದ ಕಂಪೆನಿಯಲ್ಲಿ ಕಾರ್ಮಿಕನಾಗಿ ಕಾಫಿ ಮೂಟೆ ಹೊರುವ ಕೆಲಸ ಮಾಡಿದ್ದೇನೆ. ಇವೆಲ್ಲವನ್ನು ಮನೆಯಲ್ಲಿ ಕಷ್ಟ ಇದೆ ಎಂಬ ಕಾರಣಕ್ಕಾಗಿ ಮಾಡಿಲ್ಲ ಎಂದರು.
ನನ್ನ ತಂದೆ ಬ್ರಿಟಿಷ್ ಸರಕಾರದಲ್ಲಿ ನೌಕರ ಆಗಿದ್ದರು. ಆ ಕಾಲಕ್ಕೆ ಸ್ವಂತ ಮನೆಯೂ ಇರಲಿಲ್ಲ. ತಂದೆಯ ಮನೆಯಲ್ಲಿ ಬಡತನವಿತ್ತು. ತಾಯಿಯ ಮನೆಯವರು ಶ್ರೀಮಂತರು. ದುಡ್ಡು ನೀಡಿದರೂ ಅಕ್ಕಿ ಸಿಗದ ಕಾಲದಲ್ಲಿ ನಾವು ಜೀವನ ನಡೆಸಿದ್ದೆವು. ವ್ಯವಹಾರದಲ್ಲಿ ಹಂತ ಹಂತವಾಗಿ ಬೆಳೆದು ಇಂದು ಶಿಕ್ಷಣ ಸಂಸ್ಥೆಗಳು, ಮೆಡಿಕಲ್ ಕಾಲೇಜು ಸ್ಥಾಪಿಸುವಂತಾಯಿತು ಎಂದರು.
ಜೀವನದಲ್ಲಿ ಯಾರೂ ಕೂಡಾ ನಾವು ಅಂದುಕೊಂಡದ್ದನ್ನು ಸಾಧಿಸಬಹುದು. ವ್ಯವಹಾರದಲ್ಲಿ ಹಣ ಮಾಡಬೇಕು, ಶ್ರೀಮಂತನಾಗಬೇಕು ಎಂಬ ಬಯಕೆ ನನ್ನಲ್ಲಿ ಇರಲಿಲ್ಲ. ಮನಸ್ಸಿನಲ್ಲಿ ಇಚ್ಛೆ, ನಡೆ ನುಡಿ ಚೆನ್ನಾಗಿದ್ದರೆ ಜೀವನದಲ್ಲಿ ನಾವು ಅಂದುಕೊಂಡದ್ದನ್ನು ಸಾಧಿಸಬಹುದು. ಅದಕ್ಕೆ ನನ್ನ ಜೀವನವೇ ಸಾಕ್ಷಿ. ಅಡಿಕೆ ಹೆಕ್ಕಲು ಹೋದರೆ ಎರಡು ಆಣೆ ಸಂಬಳ ನೀಡುತ್ತಿದ್ದರು. ಇದಕ್ಕಾಗಿ ಶಾಲೆಗೆ ಚಕ್ಕರ್ ಹಾಕಿ ಅಡಿಕೆ ಹೆಕ್ಕಲು ಹೋಗುತ್ತಿದ್ದೆ ಎಂದು ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.
1972ರಲ್ಲಿ ಟಿಂಬರ್ ಕಂಪೆನಿ ಸ್ಥಾಪಿಸಿದೆ. ಅದಕ್ಕೂ ಎರಡು ವರ್ಷಗಳ ಮೊದಲು ಕಂಪೆನಿ ಸ್ಥಾಪಿಸಲು ನನಗೆ ಅನುಮತಿ ನಿರಾಕರಿಸಿದ್ದರು. 2000ನೇ ಇಸವಿಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಎರಡನೇ ದೊಡ್ಡ ಕಂಪೆನಿ ಎಂಬ ಅವಾರ್ಡ್ ನಮ್ಮ ಕಂಪೆನಿಗೆ ಲಭಿಸಿತ್ತು. ಬರ್ಮಾ, ದುಬೈ, ಇಂಡೋನೇಷ್ಯಾ, ಮಲೇಷ್ಯಾ ಸಹಿತ ಹಲವು ದೇಶಗಳಲ್ಲಿ ಕಂಪೆನಿಯ ವ್ಯವಹಾರ ನಡೆಯುತ್ತಿದೆ ಎಂದರು.
ಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ವೇಳೆ ಎದುರಿಸಬೇಕಾದ ಸವಾಲುಗಳನ್ನು ಅರ್ಥಮಾಡಿಕೊಂಡಿದ್ದೇನೆ. ಉತ್ತಮ ಶಿಕ್ಷಣ ಸಿಗಲು ಇರುವ ಹಲವು ತೊಡಕುಗಳನ್ನು ಸ್ವತಃ ಕಂಡಿದ್ದೇನೆ. ನೋವುಗಳನ್ನು ಅನುಭವಿಸಿದ್ದೇನೆ. ಇದೇ ನೋವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಕಾರಣವಾಯಿತು. ನನ್ನ ಹುಟ್ಟೂರಿನಲ್ಲಿ ಎರಡು ಮೆಡಿಕಲ್ ಕಾಲೇಜುಗಳಿವೆ. ಊರಿನ ಹೊರಗಿನವರು ಅದನ್ನು ಸ್ಥಾಪಿಸಿದ್ದಾರೆ. ಹುಟ್ಟೂರಿನಲ್ಲಿ ನಾನೂ ಮೆಡಿಕಲ್ ಕಾಲೇಜು ತೆರೆಯಬೇಕು ಎಂಬ ಕನಸಿತ್ತು. ವೈದ್ಯರಾದ ಮಗಳು ಹಾಗೂ ವೈದ್ಯ ಅಳಿಯನ ಸಹಕಾರದಿಂದ ಮೆಡಿಕಲ್ ಕಾಲೇಜು ಕನಸು ಸಾಕಾರಗೊಂಡಿದೆ ಎಂದರು.
ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಬಡ, ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಅಥವಾ ರಿಯಾಯಿತಿ ಶುಲ್ಕದಲ್ಲಿ ಶಿಕ್ಷಣ ನೀಡಲು ಬದ್ಧ. ಮುಂದೆ ಡೆಂಟಲ್ ಕಾಲೇಜು , ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದು ಯು.ಕೆ. ಮೋನು ತಿಳಿಸಿದರು.
ಗೌತಮ್ ಅದಾನಿ ಮತ್ತು ನಾನು ಒಂದೇ ಸಂದರ್ಭದಲ್ಲಿ ವ್ಯವಹಾರದ ಬಗ್ಗೆ ಮಾತನಾಡಲು ಉದ್ಯಮಿಯೊಬ್ಬರ ಬಳಿಗೆ ತೆರಳಿದ್ದೆವು. ಅದಾನಿ ಇಂದು ದೊಡ್ಡ ಉದ್ಯಮಿಯಾಗಿದ್ದಾರೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಹಿಲರಿ ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ.ಆರ್., ಪ್ರೆಸ್ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು. ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.